ವಿಧಿಗೆ ಸಂಬಂಧಿಸಿದ ಕನ್ನಡ, ಮರಾಠಿ, ಸಂತಾಲಿ, ಗೊಂಡಿ, ತಮಿಳು ಮೊದಲಾದ ಎಲ್ಲ ಭಾಷೆಗಳಲ್ಲಿಯೂ ಇರುವ ಹಲವು ಜನಪದ ಕಥೆಗಳನ್ನು ಆಧರಿಸಿ ಈ ಕಾದಂಬರಿಯನ್ನು ರಚಿಸಲಾಗಿದೆ. ಮೇಲ್ನೋಟಕ್ಕೆ ಇದು Oedipus ನ ಕಥೆಯ ಮಾದರಿ ಅನ್ನಿಸುತ್ತದೆ. ಆದರೆ ಅದನ್ನು ಮೀರಿ ಈ ನೆಲದ ಸಾಂಸ್ಕೃತಿಕ ಪ್ರಜ್ಞೆಯನ್ನು ಈ ಕಾದಂಬರಿ ಸೆರೆಹಿಡಿಯುತ್ತದೆ. ಈ ಕಥೆಗಳಲ್ಲಿ ಕೆಲವು ‘ಬದುಕು ವಿಧಿಯ ಅನುಸಾರವೇ ನಡೆಯುತ್ತದೆ’ ಎಂಬ ಸಿದ್ಧಾಂತವನ್ನು ಸಾರಿದರೆ, ‘ಮನುಷ್ಯ ಪ್ರಯತ್ನದಿಂದ ಅಥವಾ ಯುಕ್ತಿಯಿಂದ ವಿಧಿಗೇ ತಿರುಗೇಟು ನೀಡಬಹುದು’ ಎಂಬ ವಾದವನ್ನು ಇನ್ನೂ ಕೆಲವು ಕಥೆಗಳು ಪ್ರತಿಪಾದಿಸುತ್ತವೆ. ಎರಡೂ ಬಗೆಯ ಕಥೆಗಳನ್ನೂ ಇಲ್ಲಿ ಸ್ವೀಕರಿಸಲಾಗಿದೆ. ಕಡೆಗೆ ವಿಧಿಗೆ ಮರುಬಾಣವೆಂಬಂತೆ ‘ಮಾರ್ಕೋಲು’ ಎಂಬ ಶೀರ್ಷಿಕೆಯ ಈ ಕಾದಂಬರಿ ಸಾಂಕೇತಿಕವಾಗಿ ಕೊನೆಗೊಳ್ಳುತ್ತದೆ.