ರಾಮಾಯಣವನ್ನು ಆಧರಿಸಿದ ರಾಮಸೀತೆಯರ ಪ್ರೇಮಕಥೆಯೇ ಈ ನಾಟಕದ ವಸ್ತು. ಇಲ್ಲಿ ‘ಚೂಡಾಮಣಿ’ಯು ರಾಮಸೀತೆಯರ ಒಲವಿಗೆ ಸಾಂಕೇತಿಕವಾಗಿಯೂ, ಸಾಕ್ಷಿಯಾಗಿಯೂ ಇರುವುದನ್ನು ಕಾಣಬಹುದು. ಲೇಖಕಿಯ ‘ಅಪರೂಪದ ಪುರಾಣ ಕಥೆಗಳು’ ಕೃತಿಯಲ್ಲಿ ಪುರಾಣ ಕಥೆಯ ಸಣ್ಣ ಮರುನಿರೂಪಣೆಯಾಗಿ ಈ ವಸ್ತು ಮೊದಲಿಗೆ ಕಾಣಿಸಿಕೊಂಡಿತ್ತು. ಅದನ್ನೇ ಬೆಳೆಸಿ, ಇಡೀ ರಾಮಾಯಣದ ಕಥೆಯನ್ನು ಅಡಕ ಮಾಡಿ, ಕಡೆಯಲ್ಲಿ ಸುಖಾಂತದಲ್ಲಿ ಈ ನಾಟಕವನ್ನು ಕೊನೆಗೊಳಿಸಿದ್ದಾರೆ. ರಾಮಾಯಣವೆಂದರೆ ಮನಸ್ಸನ್ನು ಶೋಕವೇ ಆವರಿಸಿಕೊಳ್ಳುವುದು ಸಹಜ. ಆದರಿಲ್ಲಿ ರಾಮಾಯಣವು ಸುಖಾಂತದಲ್ಲಿ ಕೊನೆಗೊಂಡಿರುವುದು ವಿಶೇಷ. ಮುಂದೆ ಮೂರು ವರ್ಷಗಳ ಅಂತರದಲ್ಲಿ ಪ್ರಕಟಗೊಂಡ ‘ಪೂತನಿ ಮತ್ತಿತರ ನಾಟಕಗಳು’ ಸಂಕಲನದಲ್ಲಿ ಇನ್ನಷ್ಟು ಮಾರ್ಪಾಡಿನೊಂದಿಗೆ ಈ ನಾಟಕ ಸೇರ್ಪಡೆಯಾಗಿದೆ.